ವಾರ್ ೨೦೧೯ರ ಒಂದು ಹಿಂದಿ ಸಾಹಸಪ್ರಧಾನ ರೋಮಾಂಚನಕಾರಿ ಚಲನಚಿತ್ರ. ಇದನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಯಶ್ ರಾಜ್ ಫ಼ಿಲ್ಮ್ಸ್ ಲಾಂಛನದಡಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹೃತಿಕ್‌ ರೋಷನ್‌ ಮತ್ತು ಟೈಗರ್ ಶ್ರಾಫ಼್ ನಟಿಸಿರುವ ಈ ಚಿತ್ರವು ಆದೇಶಗಳ ವಿರುದ್ಧ ಹೋಗಿರುವ ತನ್ನ ಮಾಜಿ ಮಾರ್ಗದರ್ಶಿಯನ್ನು ನಾಶಮಾಡಲು ನೇಮಿಸಲ್ಪಟ್ಟ ಒಬ್ಬ ಭಾರತೀಯ ಸೈನಿಕನನ್ನು ಅನುಸರಿಸುತ್ತದೆ. ಚಿತ್ರದ ಪ್ರಧಾನ ಛಾಯಾಗ್ರಹಣವು ಸೆಪ್ಟೆಂಬರ್ ೨೦೧೮ರಲ್ಲಿ ಆರಂಭವಾಗಿ ಮಾರ್ಚ್ ೨೦೧೯ರಲ್ಲಿ ಮುಗಿಯಿತು. ಆರಂಭದಲ್ಲಿ ಈ ಚಿತ್ರದ ಶೀರ್ಷಿಕೆ ಫ಼ೈಟರ್ಸ್ ಎಂದಾಗಿತ್ತು. ಆದರೆ ಜುಲೈ ೨೦೧೯ರಲ್ಲಿ ಅಧಿಕೃತ ಟೀಸರ್‌ನ ಬಿಡುಗಡೆಯ ನಂತರ ಚಿತ್ರದ ಶೀರ್ಷಿಕೆಯನ್ನು ಬದಲಿಸಲಾಯಿತು. ಚಿತ್ರದ ಸಂಗೀತವನ್ನು ವಿಶಾಲ್-ಶೇಖರ್ ಸಂಯೋಜಿಸಿದ್ದರೆ, ಹಾಡುಗಳಿಗೆ ಸಾಹಿತ್ಯವನ್ನು ಕುಮಾರ್ ಬರೆದಿದ್ದಾರೆ. ಧ್ವನಿವಾಹಿನಿಯನ್ನು ವೈಆರ್‌ಎಫ಼್ ಲಾಂಛನದಡಿ ಬಿಡುಗಡೆ ಮಾಡಲಾಯಿತು. ₹170 ಕೋಟಿ ಬಂಡವಾಳದಲ್ಲಿ ತಯಾರಾದ ವಾರ್ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ೨ ಅಕ್ಟೋಬರ್ ೨೦೧೯ರಂದು ಗಾಂಧಿ ಜಯಂತಿಯಂದು ಬಿಡುಗಡೆಯಾಯಿತು. ಚಿತ್ರವು ವಿಮರ್ಶಕರಿಂದ ಬಹುತೇಕವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ರೋಶನ್ ಹಾಗೂ ಶ್ರಾಫ಼್‍ರ ಅಭಿನಯವನ್ನು ಸಾಹಸ ದೃಶ್ಯಸರಣಿಗಳನ್ನು ಪ್ರಶಂಸಿಸಲಾಯಿತು, ಆದರೆ ಚಿತ್ರದ ಬರವಣಿಗೆಯನ್ನು ಟೀಕಿಸಲಾಯಿತು. ಈ ಚಿತ್ರವು ವಿಶ್ವಾದ್ಯಂತ ₹475 ಕೋಟಿಗಿಂತ ಹೆಚ್ಚು ಹಣವನ್ನು ಗಳಿಸಿ ಭಾರಿ ಬಾಕ್ಸ್ ಆಫ಼ಿಸ್ ಯಶಸ್ಸಾಗಿ ಹೊರಹೊಮ್ಮಿತು ಮತ್ತು ೨೦೧೯ರ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರವಾಗಿತ್ತು. == ಕಥಾವಸ್ತು == ನವ ದೆಹಲಿಯಲ್ಲಿ, ದೂರದಿಂದ ಒಬ್ಬ ಗುರಿಯಾದ ವ್ಯಕ್ತಿಯನ್ನು ಕೊಲ್ಲಲು ವಯಸ್ಸಾದ ಗೂಢಚಾರ ವಿ.ಕೆ. ನಾಯ್ಡು (ಮೋಹಿತ್ ಚೌಹಾನ್) ಒಬ್ಬ ರಹಸ್ಯ ಬಂದೂಕುಗಾರನನ್ನು ಸಂಪರ್ಕಿಸುತ್ತಾನೆ. ಆದರೆ ಬದಲಾಗಿ ಆ ಬಂದೂಕುಕಾರನು ನಾಯ್ಡುಗೆ ಗುಂಡು ಹೊಡೆದು ತಪ್ಪಿಸಿಕೊಳ್ಳುತ್ತಾನೆ. ಅವನು ಸಂಸ್ಥೆಯ ಅತ್ಯುತ್ತಮ ಗೂಢಚಾರರಲ್ಲಿ ಒಬ್ಬನೆಂದು ಪರಿಗಣಿತವಾದ ಆದರೆ ಈಗ ಆದೇಶಗಳ ವಿರುದ್ಧ ಹೋಗಿರುವ, ಮಾಜಿ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (ರಾ) ಗೂಢಚಾರ ಕಬೀರ್ (ಹೃತಿಕ್ ರೋಶನ್) ಎಂದು ಬಹಿರಂಗಗೊಳಿಸಲಾಗುತ್ತದೆ. ಸ್ವಲ್ಪ ನಂತರ, ಕಬೀರ್‌ನ ಮಾಜಿ ಮೇಲಾಧಿಕಾರಿ ಹಾಗೂ ರಾ ಜಂಟಿ ನಿರ್ದೇಶಕ ಕರ್ನಲ್ ಸುನಿಲ್ ಲೂಥ್ರಾ (ಆಷುತೋಶ್ ರಾಣಾ) ಕಬೀರ್‌ನ ನಂಬಿಕೆದ್ರೋಹವನ್ನು ರಕ್ಷಣಾ ಸಚಿವ ಶೇರ್ನಾ ಪಟೇಲ್‍ಗೆ ಪ್ರಸಾರಮಾಡುತ್ತಾನೆ. ಹಿಂದೆ ಕಬೀರ್‌ನಿಂದ ತರಬೇತಿಪಡೆದ ಮತ್ತು ಮಾಜಿ ಗೂಢಚಾರನ ಬಗ್ಗೆ ಅತಿಯಾದ ಗೌರವ ಹೊಂದಿರುವ, ಖಾಲಿದ್ ರಹಮಾನಿಯನ್ನು (ಟೈಗರ್ ಶ್ರಾಫ಼್) ಕರೆಯಿಸುವಂತೆ ಅವರು ಸಂಸ್ಥೆಗೆ ಹೇಳುತ್ತಾರೆ. ಹಿನ್ನೋಟದ ನಿರೂಪಣೆಯು ಕಬೀರ್‌ಗೆ ಖಾಲಿದ್‍ನನ್ನು ಪರಿಚಯಿಸುವುದನ್ನು ತೋರಿಸುತ್ತದೆ. ಕಬೀರ್ ಸುನಿಲ್‍ಗೆ ರಾಷ್ಟ್ರದ ಬಗ್ಗೆ ಖಾಲಿದ್‍ನ ನಿಷ್ಠೆಯನ್ನು ಪ್ರಶ್ನಿಸುತ್ತಾನೆ, ಮತ್ತು ಖಾಲಿದ್‍ನ ಮೃತ ತಂದೆ ಅಬ್ದುಲ್ ರಹಮಾನಿ ತನಗೆ ಗುಂಡು ಹೊಡೆದಾಗ ದೇಶಕ್ಕೆ ಮತ್ತು ಸ್ವತಃ ಕಬೀರ್‌ಗೆ ವಿಶ್ವಾಸಘಾತಕನಾಗಿದ್ದನು ಎಂದು ವಾದಿಸುತ್ತಾನೆ. ಆದರೆ, ತಾನು ಕಬೀರ್‌ನನ್ನು ಪ್ರಮುಖ ಸ್ಫೂರ್ತಿ ಎಂದು ಪರಿಗಣಿಸುವ, ಮತ್ತು ಅವನ ಬಗ್ಗೆ ಅತಿಯಾದ ಗೌರವವನ್ನು ಹೊಂದಿರುವ ಖಾಲಿದ್ ಏನೇ ಬಂದರೂ ತಾನು ತನ್ನ ದೇಶದ ಸೇವೆ ಮಾಡಿ ತನ್ನ ಕುಟುಂಬದ ಗೌರವವನ್ನು ಮರಳಿ ಪಡೆಯುವುದಾಗಿ ಹೇಳುತ್ತಾನೆ. ಒಂದು ಯಶಸ್ವಿ ಕಾರ್ಯಾಚರಣೆಯ ನಂತರ, ಆಯುಧವನ್ನು ಗುರಿಯಿಡುವಾಗ ಖಾಲಿದ್ ಕುರುಡು ಬಿಂದು ಹೊಂದಿರುವುದನ್ನು ಗಮನಿಸಿ ಕಬೀರ್ ಅವನನ್ನು ಪ್ರಶ್ನಿಸುತ್ತಾನೆ. ಅವನ ತಂದೆಯ ಪ್ರಸಿದ್ಧಿಯ ಪರಿಣಾಮವಾಗಿ ಬಾಲ್ಯದಲ್ಲಿ ಶಾಲೆಯ ಒಬ್ಬ ಪೀಡಕನು ತನ್ನ ಬಲಗಣ್ಣಿಗೆ ಗಾಯಮಾಡಿದ್ದರಿಂದ ತನ್ನ ದೃಷ್ಟಿಯು ದುರ್ಬಲವಾಯಿತು ಎಂದು ಅದಕ್ಕೆ ಖಾಲಿದ್ ಉತ್ತರಿಸುತ್ತಾನೆ. ಆದರೆ, ಅವನ ತಾಯಿ ನಫ಼ೀಸಾಳಿಗಾಗಿ ಅವನು ವ್ಯಕ್ತಪಡಿಸುವ ಪ್ರೀತಿ ಮತ್ತು ಅಕ್ಕರೆಯನ್ನು ನೋಡಿ ಕಬೀರ್ ಅಂತಿಮವಾಗಿ ಖಾಲಿದ್‍ನನ್ನು ಸ್ವೀಕರಿಸಿ ಅವನನ್ನು ತನ್ನ ವಿಶೇಷ ಪಡೆಗಳ ತಂಡದಲ್ಲಿ ಸೇರಿಸಿಕೊಳ್ಳುತ್ತಾನೆ. ಇದರಲ್ಲಿ ಸಹ ಕ್ಷೇತ್ರ ಗೂಢಚಾರರಾದ ಸೌರಭ್ (ಯಶ್ ರಾಜ್ ಸಿಂಗ್), ಪ್ರತೀಕ್ ಹಾಗೂ ಮುತ್ತು ಮತ್ತು ಹ್ಯಾಕರ್ ಅದಿತಿ (ಅನುಪ್ರಿಯಾ ಗೋಯೆಂಕಾ) ಇರುತ್ತಾರೆ. ಕಬೀರ್ ತನ್ನ ಮುಂದಿನ ಕಾರ್ಯಾಚರಣೆಯನ್ನು ಯೋಜಿಸುತ್ತಾನೆ. ಅಪರಾಧಿ ಮಹಾಮೇಧಾವಿ ಹಾಗೂ ಭಯೋತ್ಪಾದಕ-ಉದ್ಯಮಿಯಾದ ರಿಜ಼್ವಾನ್ ಇಲ್ಯಾಸಿ ಇವನ ಗುರಿಯಾಗಿರುತ್ತಾನೆ. ತಂಡವು ಇಲ್ಯಾಸಿಯನ್ನು ಸೆರೆಹಿಡಿದಾಗ ಅವನು ಕಬೀರ್‌ನ ತಂಡದಲ್ಲಿ ತನ್ನ ಭಯೋತ್ಪಾದಕ ಉದ್ದೇಶಕ್ಕಾಗಿ ಸಂಪೂರ್ಣವಾಗಿ ನಿಷ್ಠನಾಗಿರುವ ಒಬ್ಬ ಒಳಬೇಹುಗಾರನಿದ್ದಾನೆ ಎಂದು ಬಹಿರಂಗಪಡಿಸುತ್ತಾನೆ. ಪ್ರತೀಕ್ ಮತ್ತು ಮುತ್ತುನನ್ನು ಸಾಯಿಸಿ ತಾನೇ ಆ ಒಳಬೇಹುಗಾರನೆಂದು ಸೌರಭ್ ಬಹಿರಂಗಪಡಿಸುತ್ತಾನೆ; ದುರಾಸೆಯಿಂದ ಕುರುಡನಾಗಿ ಅವನು ತನ್ನ ದೇಶಕ್ಕೆ ದ್ರೋಹ ಮಾಡಿ ಇಲ್ಯಾಸಿಯ ಸುಮಾರು $100 ದಶಲಕ್ಷದ ಪ್ರಸ್ತಾಪವನ್ನು ಒಪ್ಪಿಕೊಂಡಿರುತ್ತಾನೆ. ಸಿಟ್ಟಾದ ಖಾಲಿದ್ ಸೌರಭ್‍ನನ್ನು ಬೆನ್ನಟ್ಟುತ್ತಾನೆ. ಕಬೀರ್ ಒಬ್ಬನೇ ಇಲ್ಯಾಸಿಯನ್ನು ನಿಭಾಯಿಸಬೇಕಾಗುತ್ತದೆ. ಇಲ್ಯಾಸಿಯನ್ನು ಬಹುತೇಕವಾಗಿ ಪುನಃ ಸೆರೆಹಿಡಿಯುವಲ್ಲಿ ಯಶಸ್ವಿಯಾಗುವ ಕಬೀರ್‌ನಿಗೆ ಹಠಾತ್ತನೇ ಇಲ್ಯಾಸಿಯ ಒಬ್ಬ ತೈನಾತಿ ಗುಂಡು ಹೊಡೆದು ಎಚ್ಚರ ತಪ್ಪಿಸುತ್ತಾನೆ. ಅವನಿಗೆ ಆಸ್ಪತ್ರೆಯಲ್ಲಿ ಎಚ್ಚರವಾದಾಗ ಅಲ್ಲಿ ಗಾಯಗೊಂಡ ಖಾಲಿದ್ ಕೂಡ ಚೇತರಿಸಿಕೊಳ್ಳುತ್ತಿರುವುದನ್ನು ಕಾಣುತ್ತಾನೆ. ಸೌರಭ್ ಸತ್ತಿದ್ದಾನೆಂದು ಖಾಲಿದ್ ಹೇಳುತ್ತಾನೆ. ವರ್ತಮಾನದಲ್ಲಿ, ಖಾಲಿದ್ ಕಬೀರ್‌ನನ್ನು ಹುಡುಕಲು ಪ್ರಯತ್ನಪಟ್ಟು ವಿಫಲನಾಗುತ್ತಾನೆ. ಮತ್ತೊಬ್ಬ ಗೂಢಚಾರಿಯ ಕೊಲೆಯಾದಾಗ ಅವನನ್ನು ಕಾರ್ಯಾಚರಣೆಯಿಂದ ಇನ್ನೇನ್ನು ತೆಗೆಯಬೇಕೆನ್ನುವಷ್ಟರಲ್ಲಿ ತನಗೆ ಮತ್ತೊಂದು ಅವಕಾಶ ನೀಡಬೇಕೆಂದು ಅವನು ಸುನಿಲ್ ಹಾಗೂ ಶೇರ್ನಾರಿಗೆ ಮನದಟ್ಟು ಮಾಡುತ್ತಾನೆ. ಅವನು ಕಬೀರ್‌ನನ್ನು ಪತ್ತೆಹಚ್ಚಲು ಯಶಸ್ವಿಯಾಗಿ ಡಾ. ಉತ್ಪಲ್ ಬಿಸ್ವಾಸ್ ಅವನ ಮುಂದಿನ ಗುರಿಯೆಂದು ತಿಳಿದುಕೊಳ್ಳುತ್ತಾನೆ. ವಾಸ್ತವವಾಗಿ ಕಬೀರ್ ಬಿಸ್ವಾಸ್ ಹಾಗೂ ನಾಯ್ಡು ಸೇರಿದಂತೆ ಇಲ್ಯಾಸಿಯ ಸಹವರ್ತಿಗಳನ್ನು ಗುರಿಮಾಡುತ್ತಿದ್ದಾನೆಂದು ಮತ್ತು ಇಲ್ಯಾಸಿಗೆ ಬೇಕಾದ ಒಂದು ರಹಸ್ಯ ಸಂಕೇತವನ್ನು ಪಡೆಯಲು ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾನೆಂದು ಖಾಲಿದ್‌ಗೆ ಅರಿವಾಗುತ್ತದೆ. ಆದರೆ ಬಿಸ್ವಾಸ್ ಕೊಲೆಯಾಗುವುದನ್ನು ತಡೆಯುವುದು ಖಾಲಿದ್‍ನಿಂದ ಸಾಧ್ಯವಾಗುವುದಿಲ್ಲ. ಸಿಟ್ಟಾದ ಖಾಲಿದ್ ಕಬೀರ್‌ನನ್ನು ಬೆನ್ನಟ್ಟಿದರೂ ಅವನು ಮತ್ತೊಮ್ಮೆ ತಪ್ಪಿಸಿಕೊಳ್ಳುತ್ತಾನೆ. ಕಬೀರ್ ರೂಹಿ ಎಂಬ ಚಿಕ್ಕ ಹುಡುಗಿಯನ್ನು ಮುದ್ದುಮಾಡುತ್ತಿರುವುದು ಕಾಣಿಸುತ್ತದೆ. ಅವನು ರೂಹಿಯ ಒಂಟಿ ತಾಯಿ ನೈನಾಳ ಬಗ್ಗೆ ನೆನಪಿಸಿಕೊಳ್ಳುತ್ತಾನೆ. ಅವಳನ್ನು ಒಬ್ಬ ಪರಿಪೂರ್ಣ ನಾಗರಿಕ ಸ್ವತ್ತನಾಗಿ ಮಾಡಲು ಇವನು ಅವಳೊಂದಿಗೆ ಸಂಬಂಧ ಬೆಳೆಸುತ್ತಾನೆ. ಅವನ ನಿಜವಾದ ಗುರುತು ತಿಳಿದ ಮೇಲೆ, ನೈನಾ ಕಬೀರ್‌ಗೆ ಸಹಾಯ ಮಾಡಲು ಅಪನಂಬಿಕೆ ಹೊಂದಿ ಹಿಂಜರಿಯುತ್ತಾಳೆ. ಆದರೆ ತನ್ನ ಮಗಳ ಸಲುವಾಗಿ ಅವನಿಗೆ ಸಹಾಯ ಮಾಡುವುದನ್ನು ಮುಂದುವರಿಸಲು ಒಪ್ಪಿಕೊಳ್ಳುತ್ತಾಳೆ. ಇಲ್ಯಾಸಿಯ ಜೊತೆಗಾರ ಫ಼ಿರೋಜ಼್ ಕಾಂಟ್ರ್ಯಾಕ್ಟರ್ ಮೇಲೆ ಗೂಢಚರ್ಯೆ ಮಾಡಲು ನೈನಾಳನ್ನು ಕಳಿಸಲಾಗುತ್ತದೆ. ಆದರೆ ಇಲ್ಯಾಸಿಯ ಅನೇಕ ಸಂಪರ್ಕಗಳ ಪೈಕಿ ಹಿಂದೆ ಪ್ಲಾಸ್ಟಿಕ್ ಸರ್ಜರಿಯಿಂದ ಇಲ್ಯಾಸಿಯನ್ನು ರೂಪವನ್ನು ಮರೆಮಾಡಲು ನೆರವಾಗಿದ್ದ ಡಾ. ಮಲ್ಲಿಕಾ ಸಿಂಘಾಲ್ ಎಂಬ ಪ್ಲಾಸ್ಟಿಕ್ ಸರ್ಜನ್ ಇದ್ದಾಳೆ ಎಂದು ಅದಿತಿಯ ಸಂಪರ್ಕದಲ್ಲಿರುವ ಕಬೀರ್‌ಗೆ ಗೊತ್ತಾಗುತ್ತದೆ. ವಾಸ್ತವವಾಗಿ ಕಾಂಟ್ರ್ಯಾಕ್ಟರ್‌ನೇ ಇಲ್ಯಾಸಿ ಎಂದು ಅರಿವಾಗಿ, ಅವನು ನೈನಾಳ ನೆರವಿಗಾಗಿ ಅವಸರಿಸುತ್ತಾನೆ ಆದರೆ ಅವಳ ಪ್ರಾಣವನ್ನುಳಿಸಳು ಬಹ್ಳ ತಡವಾಗಿರುತ್ತದೆ. ಖಾಲಿದ್ ರೂಹಿ ಮೂಲಕ ಕಬೀರ್‌ನನ್ನು ಪತ್ತೆಹಚ್ಚುತ್ತಾನೆ. ಅವರು ಕಬೀರ್‌ನ ಅಡಗುತಾಣದಲ್ಲಿ ಚಿಕ್ಕದಾದ ಚರ್ಚೆನಡೆಸುತ್ತಿರುವಾಗ ಅವರ ಮೇಲೆ ಹಠಾತ್ತಾಗಿ ದಾಳಿಯಾಗುತ್ತದೆ. ಇಬ್ಬರೂ ದಾಳಿಕಾರರನ್ನು ಸೋಲಿಸುವಲ್ಲಿ ಯಶಸ್ವಿಯಾಗಿ ಕೇರಳದಲ್ಲಿನ ಅದಿತಿಯ ಮದುವೆಗೆ ಹೋಗುತ್ತಾರೆ. ಅಲ್ಲಿ ಅವರು ಇಲ್ಯಾಸಿಗೆ ಬೇಕಾಗಿರುವ ರಹಸ್ಯ ಸಂಕೇತವಿರುವ ಚಾಲಕ ಸಾಧನವನ್ನು ಪಡೆದುಕೊಳ್ಳುತ್ತಾರೆ. ಆದರೆ, ಕಬೀರ್ ಖಾಲಿದ್‌ಗೆ ಚಾಲಕ ಸಾಧನವನ್ನು ಒಪ್ಪಿಸಿದ ಮೇಲೆ, ಅವನೊಂದಿಗೆ ಅವನ ದೋಣಿಯಲ್ಲಿ ಕುಳಿತು ಪಾನೀಯ ಸೇವಿಸುತ್ತಿರುವಾಗ ಖಾಲಿದ್ ಅವನಿಗೆ ವಿಷವಿಕ್ಕುತ್ತಾನೆ. ಇಲ್ಯಾಸಿ ಖಾಲಿದ್‍ನನ್ನು ಗುಂಡಿಕ್ಕಿ ಸಾಯಿಸಿ, ನಂತರ ಖಾಲಿದ್ ಆಗಿ ರೂಪ ಬದಲಾಯಿಸಿಕೊಳ್ಳಲು ಸೌರಭ್ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದನು ಎಂದು ಖಾಲಿದ್ ಮತ್ತು ಸೌರಭ್‍ನ ನಡುವಿನ ಬೆನ್ನಟ್ಟುವಿಕೆಯ ಹಿನ್ನೋಟದ ನಿರೂಪಣೆಯು ಬಹಿರಂಗಗೊಳಿಸುತ್ತದೆ. ಇದೇ ರೀತಿ ಇಲ್ಯಾಸಿ ಕಾಂಟ್ರ್ಯಾಕ್ಟರ್ ಆಗಿರುತ್ತಾನೆ. ದೋಣಿಯಲ್ಲಿ, ಸೌರಭ್ ವಿಷ ಸೇವಸಿದ ಮತ್ತು ಅಸಹಾಯಕನೆಂದು ತೋರುವ ಕಬೀರ್‌ನನ್ನು ನದಿಯೊಳಗೆ ಎಸೆಯುತ್ತಾನೆ. ಸೌರಭ್ ಇಲ್ಯಾಸಿ ಬಳಿಗೆ ಮರಳುತ್ತಾನೆ. ಇಲ್ಯಾಸಿ ತನ್ನನ್ನು ತಾನು ಒಂದು ಭಾರೀ ಶಸ್ತ್ರಸಜ್ಜಿತ ಹಿಮಭೇದಕ ಹಡಗಿನಲ್ಲಿ ಆಧರಿಸಿಕೊಳ್ಳುತ್ತಾನೆ. ಇಲ್ಯಾಸಿ ಭಾರತ-ಪಾಕಿಸ್ತಾನ ಗಡಿರೇಖೆಯ ಮೇಲ್ವಿಚಾರಣೆ ಮಾಡುತ್ತಿರುವ ಒಂದು ಭಾರತೀಯ ಸೇನಾ ಉಪಗ್ರಹದ ನಿರ್ದೇಶಾಂಕಗಳಿರುವ ಸಂಕೇತವನ್ನು ದಾಖಲಿಸುತ್ತಾನೆ. ಇದು ದೂರದ ಪ್ರದೇಶಗಳಲ್ಲಿ ಭಾರತೀಯ ಸೇನಾ ಪಡೆಗಳಿಗೆ ಸಂವಹನಕ್ಕೆ ಆಸರೆಯಾಗಿರುತ್ತದೆ. ಅವನು ಉಪಗ್ರಹವನ್ನು ನಾಶಮಾಡಲು ಇನ್ನೇನು ಒಂದು ಉಪಗ್ರಹ ನಾಶಕ ಕ್ಷಿಪಣಿಯನ್ನು ಉಡಾಯಿಸಬೇಕೆನ್ನುವಷ್ಟರಲ್ಲಿ ಕಬೀರ್ ಧುಮುಕುಕೊಡೆಯಿಂದ ಹಡಗಿನ ಮೇಲೆ ಇಳಿದು ತಾನೊಬ್ಬನೇ ಹಡಗಿನ ಮೇಲೆ ದಾಳಿಮಾಡಿ ಇಲ್ಯಾಸಿಯ ಸೇನೆಯನ್ನು ನಾಶಮಾಡುತ್ತಾನೆ. ಅವನು ಸೌರಭ್‍ನ ಎದುರುಬಂದು, ಅವನ ದುರ್ಬಲ ದೃಷ್ಟಿಯ ಕಾರಣ ಖಾಲಿದ್‍ಗೆ ಸಾಧ್ಯವಾಗದಿದ್ದ ರೀತಿಯಲ್ಲಿ ಗುರಿಯಿಟ್ಟು ಗುಂಡು ಹೊಡೆದದ್ದನ್ನು ನೋಡಿ, ಮತ್ತು ಖಾಲಿದ್‍ ನಿಷೇಧಿತವೆಂದು ಪರಿಗಣಿಸಿದ್ದ ಮದ್ಯವನ್ನು ಕುಡಿಯುವ ಅವನ ಆಯ್ಕೆಯ ಕಾರಣ ಅವನು ಖಾಲಿದ್ ಅಲ್ಲ ಎಂಬುದು ತನಗೆ ಗೊತ್ತಿತ್ತು ಬಹಿರಂಗಪಡಿಸುತ್ತಾನೆ. ಹಾಗಾಗಿ, ಅವನ ಮೇಲೆ ಗೂಢಚರ್ಯೆ ಮಾಡಲು ಅದಿತಿಯನ್ನು ಇಟ್ಟು ತನ್ನ ಪಾನೀಯದಲ್ಲಿನ ವಿಷಕ್ಕಾಗಿ ವಿಷಹಾರಿಯನ್ನು ಪಡೆದುಕೊಂಡಿರುತ್ತಾನೆ. ಜೊತೆಗೆ, ಅವನು ಸೌರಭ್‍ಗೆ ತಪ್ಪು ನಿರ್ದೇಶಾಂಕಗಳನ್ನು ನೀಡಿರುತ್ತಾನೆ. ಅದು ಕ್ಷಿಪಣಿಯನ್ನು ಗಾಳಿಯಲ್ಲಿ ತಿರುಗಿಸಿ ಮತ್ತೆ ವಾಪಸ್ ಹಡಗಿನ ಕಡೆಗೆ ಮುಖ ಮಾಡುವಂತೆ ಮಾಡಿರುತ್ತದೆ. ಇಲ್ಯಾಸಿಯನ್ನು ತ್ಯಜಿಸಬೇಕೆಂದು ನಿರ್ಧರಿಸಿ, ಸೌರಭ್ ನಂತರದ ಮುಖಾಮುಖಿಯಲ್ಲಿ ಅವನನ್ನು ಗುಂಡಿಕ್ಕಿ ಸಾಯಿಸಿ ಓಡಿಹೋಗುತ್ತಾನೆ. ಹಿಂತಿರುಗಿದ ಕ್ಷಿಪಣಿಯಿಂದ ಹಡಗು ಸ್ಫೋಟಗೊಳ್ಳುತ್ತಿದ್ದಂತೆ, ಕಬೀರ್ ಸೌರಭ್‍ನನ್ನು ಹಿಂಬಾಲಿಸಿ ಒಂದು ಶಿಥಿಲವಾದ ಚರ್ಚ್‌ನಲ್ಲಿ ತೀವ್ರವಾದ ಹೊಡೆದಾಟದ ನಂತರ ಅವನನ್ನು ಮಣಿಸುತ್ತಾನೆ. ಚರ್ಚ್‌ನ ಗುಮ್ಮಟವು ಸೌರಭ್‍ನ ಮೇಲೆ ಕುಸಿದು ಬಿದ್ದು ಅವನನ್ನು ಸಾಯಿಸುತ್ತದೆ. ಅವನ ತ್ಯಾಗಕ್ಕಾಗಿ ಗುಪ್ತಚರ ಸಂಸ್ಥೆಯು ಖಾಲಿದ್‍ನನ್ನು ಮರಣೋತ್ತರವಾಗಿ ಸನ್ಮಾನಿಸುತ್ತದೆ. ನಫ಼ೀಸಾ ರಾಷ್ಟ್ರಪತಿಯಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತಾಳೆ. ಸಾರ್ವಜನಿಕರಿಂದ ಈಗಲೂ ದೇಶಭ್ರಷ್ಟನೆಂದು ನಂಬಲ್ಪಟ್ಟಿರುವ ಕಬೀರ್ ರೂಹಿಯೊಂದಿಗೆ ಸಮಯ ಕಳೆಯುತ್ತಾನೆ, ಮತ್ತು ತನ್ನ ಮೇಲಧಿಕಾರಿಯೊಂದಿಗೆ ಸಣ್ಣದಾದ ಮಾತುಕತೆಯ ನಂತರ ತನ್ನ ಮುಂದಿನ ರಹಸ್ಯ ಕಾರ್ಯಾಚರಣೆಯನ್ನು ಮುಂದುವರಿಸುತ್ತಾನೆ. == ಪಾತ್ರವರ್ಗ == == ತಯಾರಿಕೆ == === ಬೆಳವಣಿಗೆ === ಯಶ್ ರಾಜ್ ಫ಼ಿಲ್ಮ್ಸ್ ಹೃತಿಕ್ ರೋಶನ್ ಮತ್ತು ಟೈಗರ್ ಶ್ರಾಫ಼್ ಇರುವ ಹೊಸ ಸಾಹಸಪ್ರಧಾನ ಚಲನಚಿತ್ರವನ್ನು ಘೋಷಿಸಿತು. ಮುಖ್ಯ ಸ್ತ್ರೀ ಪಾತ್ರವನ್ನು ವಹಿಸಲು ವಾಣಿ ಕಪೂರ್‌ರನ್ನು ಗೊತ್ತುಮಾಡಲಾಯಿತು. ಸಾಹಸ ದೃಶ್ಯಾವಳಿಗಳನ್ನು ವಿನ್ಯಾಸಗೊಳಿಸಲು ಹಾಲಿವುಡ್ ಮತ್ತು ಕೊರಿಯದ ಇಬ್ಬರು ಅಂತರರಾಷ್ಟ್ರೀಯ ಸಾಹಸ ನಿರ್ದೇಶಕರನ್ನು ನೇಮಕಮಾಡಿಕೊಳ್ಳಲಾಯಿತು. ಚಿತ್ರದ ಪರಾಕಾಷ್ಠೆ ದೃಶ್ಯವನ್ನು ವಾಸ್ತವವಾಗಿ ಆರ್ಕ್ಟಿಕ್ ವೃತ್ತದ ಮೇಲೆ ಚಿತ್ರೀಕರಿಸಲಾಗಿತ್ತು, ಮತ್ತು ಹೀಗೆ ಮಾಡಿದ ಮೊದಲ ಭಾರತೀಯ ಚಲನಚಿತ್ರವಾಯಿತು. === ಚಿತ್ರೀಕರಣ === ಪ್ರಧಾನ ಛಾಯಾಗ್ರಹಣವು ಸೆಪ್ಟೆಂಬರ್ ೨೦೧೮ ಎರಡನೇ ವಾರದಲ್ಲಿ ಆರಂಭವಾಯಿತು. ಚಿತ್ರವು ಇಬ್ಬರು ತಾರೆಯರ ನಡುವೆ ನೃತ್ಯ ಸ್ಪರ್ಧೆಯೂ ಇದೆ. ಚಿತ್ರೀಕರಣವನ್ನು ಮಾರ್ಚ್ ೨೦೧೯ರ ಆರಂಭದಲ್ಲಿ ಮುಕ್ತಾಯಗೊಳಿಸಲಾಯಿತು. == ಧ್ವನಿವಾಹಿನಿ == ಚಿತ್ರದ ಸಂಗೀತವನ್ನು ವಿಶಾಲ್-ಶೇಖರ್ ಸಂಯೋಜಿಸಿದ್ದಾರೆ ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಕುಮಾರ್ ಬರೆದಿದ್ದಾರೆ. ಎಲ್ಲ ಹಾಡುಗಳ ತುಣುಕುಗಳನ್ನು ಸಂಚಿತ್ ಬಲ್ಹರಾ ಸಂಯೋಜಿಸಿದ್ದಾರೆ. == ಮಾರಾಟಗಾರಿಕೆ ಮತ್ತು ಬಿಡುಗಡೆ == ಚಿತ್ರವನ್ನು ೨ ಅಕ್ಟೋಬರ್ ೨೦೧೯ ಗಾಂಧಿ ಜಯಂತಿಯಂದು ಬಿಡುಗಡೆ ಮಾಡಲಾಯಿತು. ಚಿತ್ರದ ಅಧಿಕೃತ್ ಫ಼ೋರ್‌ಕೆ ಟೀಜ಼ರ್‌ನ್ನು ಯಶ್ ರಾಶ್ ಫ಼ಿಲ್ಮ್ಸ್ ೧೫ ಜುಲೈ ೨೦೧೯ರಂದು ಬಿಡುಗಡೆ ಮಾಡಿತು. ಚಿತ್ರದ ಅಧಿಕೃತ ಟ್ರೇಲರ್‌ನ್ನು ಯಶ್ ರಾಜ್ ಫ಼ಿಲ್ಮ್ಸ್ ೨೭ ಆಗಸ್ಟ್ ೨೦೧೯ರಂದು ಬಿಡುಗಡೆ ಮಾಡಿತು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ಫಿಲ್ಮ್‌ಫೇರ್ ಪ್ರಶಸ್ತಿಗಳು ಅತ್ಯುತ್ತಮ ಹಿನ್ನೆಲೆ ಗಾಯಕಿ - ಶಿಲ್ಪಾ ರಾವ್ ("ಘುಂಗ್ರೂ") - ವಿಜೇತೆ ಅತ್ಯುತ್ತಮ ಸಾಹಸ - ಪಾಲ್ ಜೆನಿಂಗ್ಸ್, ಒ ಸೀ ಯಂಗ್, ಪರ್ವೇಜ಼್ ಶೇಖ್, ಫ಼್ರಾಂಜ಼್ ಸ್ಪಿಲ್‍ಹಾಸ್ - ಗೆಲುವು ಅತ್ಯುತ್ತಮ ವಿಶೇಷ ಪರಿಣಾಮಗಳು - ಶೆರಿ ಭಾರ್ದಾ, ವಿಶಾಲ್ ಆನಂದ್ - ಗೆಲುವು ಅತ್ಯುತ್ತಮ ಚಲನಚಿತ್ರ - ನಾಮನಿರ್ದೇಶಿತ ಅತ್ಯುತ್ತಮ ನಿರ್ದೇಶಕ - ಸಿದ್ಧಾರ್ಥ್ ಆನಂದ್ - ನಾಮನಿರ್ದೇಶಿತ == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ವಾರ್ (ಚಲನಚಿತ್ರ) ಫೇಸ್‌ಬುಕ್‌ನಲ್ಲಿ ವಾರ್ @ ಐ ಎಮ್ ಡಿ ಬಿ ವಾರ್